ವಿಷಯಕ್ಕೆ ಹೋಗಿ

ಆಡು ಜೀವನ: ಹಳೆಯ ಓದಿನ ನೆನಪು...


ನಿಝಾಮ್ ಅನ್ಸಾರಿ ಕಲ್ಲಡ್ಕ


ಆಡು ಜೀವಿದಂ ಎಂಬ ಮಲಯಾಳಂ ಕಾದಂಬರಿಯನ್ನು ಬರೆದವರು ಮಲಯಾಳಂ ನ ಖ್ಯಾತ ಲೇಖಕ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೆನ್ಯಾಮೀನ್. ಇದು ಇಂಗ್ಲಿಷ್, ಅರೆಬಿಕ್, ಕನ್ನಡ, ತಮಿಳು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿದೆ, ನಜೀಬ್ ಎಂಬವರ ಗಲ್ಫ್ ಜೀವನದಲ್ಲಿ ಉಂಟಾದ ನೈಜ ಘಟನೆಗಳನ್ನಾಧರಿಸಿ ಈ ಕಾದಂಬರಿಯನ್ನು ಬರೆಯಲಾಗಿದೆ. ಆಡು ಜೀವಿತಂ’ ಎಂಬ ಮಲಯಾಳಂ ಕಾದಂಬರಿಯನ್ನು ನುರಿತ ಅನುವಾದಕರಾದ ಡಾ. ಅಶೋಕ್ ಕುಮಾರ್ ರವರು ‘ಆಡುಜೀವನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದರ ಅರೆಬಿಕ್ ಅನುವಾದದ ಪ್ರಸಾರಕ್ಕೆ ಸೌದಿ ಸರ್ಕಾರ ನಿಷೇಧ ಹೇರಿತ್ತು. ಅದು, ಪ್ರಾಚೀನ ಅರಬರು ಕೂಲಿಯಾಳುಗಳ ಮೇಲೆ ಎಸಗುತ್ತಿದ್ದ ಕ್ರೂರತೆಗಳನ್ನು ನಜೀಬ್ ನ ಕಥೆಯ ಮೂಲಕ ಎಳೆಎಳೆಯಾಗಿ ಬಿಡಿಸಿ ಹೇಳಿದುದಕ್ಕೋ ಗೊತ್ತಿಲ್ಲ. ಅಂತೂ, ಕಳೆದ ಎರಡು ವರ್ಷಗಳ ಹಿಂದೆ, ಇದರ ಮೂಲ ಮಲಯಾಳಂ ,ಹಾಗೂ ಅನುವಾದ ಕನ್ನಡ ಎರಡೂ ಭಾಷೆಯಲ್ಲೂ ಓದುವ ಭಾಗ್ಯ ನನ್ನದಾಯಿತು.



ಯಾಕೆ ಈ ನೆನಪು ಈಗ ಮರುಕಳಿಸಿತೆಂದು ಕೇಳಿದರೆ, ಆಡು ಜೀವಿದಂ ಮುಂದಿನ ವರ್ಷಗಳಲ್ಲಿ ಸಿನಿಮಾ ಆಗಿ ತೆರೆಕಾಣಲಿದೆ. ಮಲಯಾಳಂ ನಟ ಪೃಥ್ವಿರಾಜ್ ನಜೀಬನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಅಂದ ಹಾಗೆ, ಲಾಕ್ ಡೌನ್ ಗೂ ಮುನ್ನ ಸಿನಿಮಾ ಚಿತ್ರೀಕರಣ ತಂಡವು, ಜೋರ್ಡಾನ್ ನ ಮರುಭೂಮಿಗೆ ಚಿತ್ರೀಕರಣಕ್ಕಾಗಿ ತೆರಳಿತ್ತು. ಶೂಟ್ ಮುಗಿಸಿ ಹಿಂತಿರುಗಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಘೋಷಣೆಯಾಗಿ, ವಿಮಾನಯಾನ ಸ್ಥಗಿತಗೊಂಡಾಗಿತ್ತು. ಹಾಗೇ, ಕಳೆದ ಒಂದು ವಾರದ ಹಿಂದೆ ತಂಡ ಕೇರಳಕ್ಕೆ ಬಂದಿಳಿದ ಸುದ್ದಿ ಮಾಧ್ಯಮಗಳು ವರದಿಮಾಡಿದ್ದವು. ಆಡು ಜೀವನದಲ್ಲಿ ನಜೀಬ್ ಯಾರಾಗಿದ್ದರು ಎಂಬುದನ್ನು ವಿವರಿಸಲು ವಿ,ಕ ಪತ್ರಿಕೆಯ ಕೃತಿ ವಿಮರ್ಶೆಯ ಭಾಗವನ್ನು ಇಲ್ಲಿ ಅಂಟಿಸುತ್ತಿದ್ದೇನೆ,


'ಆಡು ಜೀವನ' ದ ನಾಯಕ ನಜೀಬ್ (ಈತ ಈಗಲೂ ಇದ್ದಾನೆ ಎನ್ನಲಾಗಿದೆ). ಊರಿನ ನದಿಯಲ್ಲಿ ಮರಳು ಸಂಗ್ರಹಿಸಿ ಬದುಕನ್ನು ಸಾಗಿಸುತ್ತಿದ್ದವ, ಜೀವನ ನಿರ್ವಹಣೆ ಅಸಾಧ್ಯವೆನಿಸಿದಾಗ ನಜೀಬನೂ ಗಲ್ಫ್ ಬದುಕಿನ ಕನಸು ಕಂಡು, ಹೇಗೋ ವೀಸಾ ಸಂಪಾದಿಸಿ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನ ಪಾಲಿಗೆ ಸಿಗುವ ಅರ್ಬಾಬ್ (ಮಾಲೀಕ)ನಿಗೆ ಒಂದು ದೊಡ್ಡ ಮಝಾರ (ಅಡು ಸಾಕಣೆ ಕೇಂದ್ರ)ವಿರುತ್ತದೆ. ಈ ಆಡುಗಳನ್ನು ನೋಡಿಕೊಳ್ಳುವುದು ನಜೀಬನಿಗೆ ದಕ್ಕಿದ ಕೆಲಸ. ಅರ್ಬಾಬ್ ಸದಾ ಗಂಭೀರವದನ. ನಜೀಬನಿಗೆ ಗೊತ್ತಿರುವುದು ಮಲಯಾಳಂ ಮಾತ್ರ. ಮರಳುಗಾಡು, ಅರಿಯದ ಭಾಷೆ, ಕ್ರೂರಿ ಅರ್ಬಾಬ್.... ಇಂಥ ಪರಿಸ್ಥಿತಿಯಲ್ಲಿ ನಜೀಬನ ಬದುಕು ಸಾಗುತ್ತದೆ. ಮಾಲೀಕ ಹೇಳಿದ ಕೆಲಸ ಅರ್ಥವಾಗುವುದಿಲ್ಲ. ಆಗ ಅವನ ಸೊಂಟಕ್ಕೆ ಸುತ್ತಿದ ಬೆಲ್ಟು ಬಿಚ್ಚಿಕೊಳ್ಳುತ್ತದೆ. ಅದನ್ನೆತ್ತಿ ನಜೀಬನನ್ನು ಹಿಗ್ಗಾಮುಗ್ಗಾ ಥಳಿಸುತ್ತಾನೆ. ಆಡು ಸಾಕಣೆ ಕೇಂದ್ರದಲ್ಲಿ ಸಾಕಷ್ಟು ನೀರು ತಂದು ಸುರಿಯುತ್ತಾರೆ, ಟ್ಯಾಂಕರಿನಲ್ಲಿ. ಆದರೆ ಅದನ್ನು ನಜೀಬ ಮುಟ್ಟುವಂತಿಲ್ಲ. ಕುಡಿಯುವುದಕ್ಕೆ ಆಡಿನ ಹಾಲು ಸಿಗುತ್ತದೆ, ನೀರು ಸಿಗದು. ಕಕ್ಕಸಿಗೆ ಹೋದರೆ ಅಂಡು ತೊಳೆಯುವಂತಿಲ್ಲ, ಸ್ನಾನದ ಮಾತಂತೂ ಇಲ್ಲವೇ ಇಲ್ಲ. ಊರಿನ ನದಿಯ ದಡದಲ್ಲಿ ಆಟವಾಡಿ, ನೀರಿನಲ್ಲೇ ಚೆಲ್ಲಾಟವಾಡಿದ ನಜೀಬನಿಗೆ ಇಲ್ಲಿ ಯ ಾವುದಕ್ಕೂ ನೀರಿಲ್ಲ. ಆಕಸ್ಮಿಕವಾಗಿ ನೀರು ಬಳಸಿದರೆ ಅರ್ಬಾಬ್ನ ಕೈಗೆ ಮತ್ತೆ ಬೆಲ್ಟು ಬರುತ್ತದೆ. ಇಡೀ ಮರುಭೂಮಿಯಲ್ಲಿ ಮಸರಗಳದ್ದೇ ಕಾರುಬಾರು. ಆದರೆ ಒಂದು ಮಸರದಿಂದ ಮತ್ತೊಂದು ಮಸರಕ್ಕೆ ಯಾವುದೇ ಸಂಪರ್ಕವಿಲ್ಲ.


ಪ್ರತೀ ಹೆಜ್ಜೆಯೂ ಓದುಗನ ಮೈಮನಸ್ಸನ್ನು ರೋಮಾಂಚನಗೊಳಿಸುವ ‘ಆಡುಜೀವನ’ ಅರಬಿಗಳ ಕೌರ್ಯವನ್ನು ನೀರಿನ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ. ಕ್ರೂರ ಪ್ರಾಣಿಗಳಿಗಿಂತಲೂ ಕ್ರೌರ್ಯ ಅರ್ಬಾಬ್ನಲ್ಲಿ ಕಾಣುತ್ತೇವೆ. ಆಡುಗಳೊಂದಿಗೆ ಬೆಳೆಯುತ್ತಾ ನಜೀಬನೂ ಒಂದು ಆಡಾಗಿ ರೂಪಾಂತರಗೊಳ್ಳುತ್ತಾನೆ. ತನ್ನ ಊರಿನ ಅನೇಕರ ಹೆಸರನ್ನು ಆಡುಗಳಿಗಿಟ್ಟು ಸಂತೋಷಪಡುತ್ತಾನೆ. ಆದರೆ ಯಾರಿಗೂ ಯಾವುದಕ್ಕೂ ಹೆದರದ ಅರ್‌ಬಾಬ್ ಮರುಭೂಮಿಯಲ್ಲಿ ಸುರಿಯುವ ಮಳೆಗೆ ಭಯಭೀತನಾಗುತ್ತಾನೆ. ಈ ಅರ್ಬಾಬ್‌ನಿಂದ ತಪ್ಪಿಸಿಕೊಳ್ಳಲು ನಜೀಬ್ ಒಂದೆರಡು ಸಲ ವಿಫಲಯತ್ನ ನಡೆಸುತ್ತಾನೆ. ಕೊನೆಗೂ ಅಲ್ಲಿಂದ ತಪ್ಪಿಸಿಕೊಳ್ಳುವ ಶುಭದಿನ ಬರುತ್ತದೆ. ಪಕ್ಕದ ಮಸರದ ಹಕೀಂ ಹಾಗೂ ಸೋಮಾಲಿಯಾದ ಇಬ್ರಾಹಿಂ ಖಾದಿರ್ ನಜೀಬನಿಗೆ ಜೊತೆಯಾಗುತ್ತಾರೆ. ಅಲ್ಲಿಂದ ಮುಂದೆ ಮರುಭೂಮಿಯ ಭೀಕರ ಪರಿಚಯವಾಗುತ್ತದೆ. ಮರುಭೂಮಿಯ ಓಟದ ನಡುವೆ ನಡೆಯುವ ಘಟನೆಗಳು, ಅನುಭವಗಳು ಓದುಗನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತವೆ. ನಡುವೆ ಹಕೀಂ ನೀರಿಗಾಗಿ ಹಂಬಲಿಸಿ ರಕ್ತಕಾರಿ ಅಸುನೀಗುತ್ತಾನೆ. ಹಿರಿಯನಾದ ಇಬ್ರಾಹಿಂ ಖಾದಿರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ. ನಜೀಬ್ ಒಬ್ಬನೇ ನಡೆಯುತ್ತಲೂ ಓಡುತ್ತಲೂ ಹೈವೇಯನ್ನು ತಲುಪುತ್ತಾನೆ. ಸಂಭಾವಿತ ಅರಬಿಯೊಬ್ಬ ತನ್ನ ಕಾರಿನಲ್ಲಿ ನಜೀಬನನ್ನು ಬತ ಪಟ್ಟಣದಲ್ಲಿ ಇಳಿಸುತ್ತಾನೆ. ಅಲ್ಲಿರುವ ಕೇರಳದ ಕುಂಕಜಿಕ್ಕನೆಂಬ ಹೊಟೇಲ್ ಮಾಲಿಕ ನಜೀಬನಿಗೆ ದೇವರಂತೆ ಕಾಣುತ್ತಾನೆ. ನಜೀಬನ ಆವರೆಗಿನ ಬದುಕಿಗೆ ಕುಂಜಿಕ್ಕ ಮಂಗಳ ಹಾಡಿ, ಅವನನ್ನು ಕೇರಳಕ್ಕೆ ಕಳುಹಿಸುವ ಏರ್ಪಾಡು ಮಾಡುತ್ತಾನೆ.


‘ಆಡು ಜೀವನ’ದಲ್ಲಿ ಗಲ್ಭ್ ಬದುಕಿನ, ಮರುಭೂಮಿಯ ದಟ್ಟ ಚಿತ್ರಣವಿದೆ. ಓದುಗನನ್ನು ಬೇರೊಂದು ಗ್ರಹಕ್ಕೆ ಕರೆದುಕೊಂಡು ಹೋಗುವಂತಹ ವಿವರಣೆಯಿದೆ. ಕನ್ನಡದಲ್ಲಿ ಖಂಡಿತವಾಗಿಯೂ ಮರುಭೂಮಿಯ ಬದುಕಿನ ಕತೆ ಹೇಳುವ ಪುಸ್ತಕ ಬಂದಿರಲಾರದು. ಈ ಜಗತ್ತಿನಲ್ಲಿ ಎಲ್ಲರಿಗೂ ಕಷ್ಟಗಳಿರುತ್ತವೆ. ‘ಆಡು ಜೀವನ’ದ ನಜೀಬನ ಅನುಭವಗಳನ್ನು ಓದಿದಾಗ ನಮ್ಮದು ಕಷ್ಟಗಳಾಗಿ ಉಳಿಯುವುದಿಲ್ಲ. ಬದಲಿಗೆ ಮನಸ್ಸು ಹಗುರಗೊಳ್ಳುತ್ತದೆ. ಡಾ. ಅಶೋಕ್‌ಕುಮಾರ್‌ರವರ ಅನುವಾದ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ. ಅವರ ಆಯ್ಕೆಯನ್ನು ಪ್ರಶಂಸಿಸಲೇ ಬೇಕಾಗಿದೆ. ಆದರೆ ಈ ಅನುವಾದದಲ್ಲಿ ಬಹಳಷ್ಟು ಮಲಯಾಳಂ ಶಬ್ದಗಳು ಬಳಕೆಯಾಗಿವೆ. ಅವುಗಳ ಅರ್ಥವನ್ನು ಕೊನೆಯ ಪುಟದಲ್ಲಿ ಕೊಡಲಾಗಿದೆ. ಆದರೆ ಇದನ್ನು ಆಯಾ ಪುಟದಲ್ಲೇ ಕೊಟ್ಟಿದ್ದಿದ್ದರೆ ಓದುಗನ ಓದಿನ ಓಟ ಮತ್ತಷ್ಟು ಚುರುಕಾಗುತ್ತಿತ್ತು. ಪಡಚ್ಚೋನೇ, ಪಡೆದವನೇ, ಅಲ್ಲಾಹ್, ದೇವರೇ ಎಂಬ ಒಂದೇ ಅರ್ಥದ ಹಲವು ಶಬ್ದಗಳನ್ನು ಅಶೋಕ್‌ಕುಮಾರ್ ಇಲ್ಲಿ ಬಳಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ‘ಆಡು ಜೀವನ’ ಕನ್ನಡಕ್ಕೆ ಅಶೋಕ್ ಅವರು ನೀಡಿರುವ ಅತ್ಯುತ್ತಮ ಅನುವಾದ ಕೃತಿ. ಇದಕ್ಕೆ ಎಸ್ ಎಂ ಪೆಜತ್ತಾಯ ಅವರ ಒಳ್ಳೆಯ ಮುನ್ನುಡಿಯೂ ಇದೆ.


*********************************************************************************************


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...