ವಿಷಯಕ್ಕೆ ಹೋಗಿ

ಕೋವಿಡ್ ಕಾಲದ ಓದು: 'ಬತ್ತದ ತೊರೆ'


ಶಿವರಾಮ ಕಾರಂತರ 'ಬತ್ತದ ತೊರೆ' ೧೯೫೩ ರಲ್ಲಿ ಮೂಡಿಬಂದ ಕೃತಿ. ಕನ್ನಡ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಅಪಾರವಾದುದೆಂಬುವುದರಲ್ಲಿ ಎರಡು ಮಾತಿಲ್ಲ. ಕಡಲ ತೀರದ ಭಾರ್ಗವರೆಂದು ಖ್ಯಾತನಾಮರಾದ ಕಾರಂತರು ತಮ್ಮ ೫೦ ನೇಯ ವಯಸ್ಸಿನ ಆಸುಪಾಸಿನಲ್ಲಿ ಬರೆದ ಕೃತಿಯಿದು. ಅವರ ಸಮಕಾಲೀನರಾಗಿ ಹಲವು ಕಾದಂಬರಿಕಾರರು ಇದ್ದರೂ ಕೂಡಾ, ಅವರ ಕಾದಂಬರಿ ಪ್ರಕಾರದ ಸಾಧ್ಯತೆಗಳ ಅನಾವರಣ, ಅವುಗಳಲ್ಲಿನ ಹೊಸ ಪ್ರಯೋಗಗಳು ಇವುಗಳೆಲ್ಲಾ ಉಳಿದವರಿಗಿಂತಲೂ ಕಾರಂತರನ್ನು ಶ್ರೇಷ್ಠರನ್ನಾಗಿಸುತ್ತದೆ. ಇನ್ನು ಬತ್ತದ ತೊರೆ ಕಾದಂಬರಿಯಲ್ಲಿ ಐವರು ತರುಣಿಯರ ವಾಸ್ತವಿಕ ಜೀವನವನ್ನು ಮೂಲವಸ್ತುವನ್ನಾಗಿಸಿಕೊಂಡು ಮಂಜುಳೆ, ವಿನತೆ, ಅಂಜಲಿ ಈ ಮೂರು ಸ್ತ್ರೀ ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ. ಸಹಜ ಪ್ರೇಮದಿಂದ ನಿರಾಶೆಗೊಂಡು ಮದುವೆ ಹುಳಿಯೆಂದು ತಿಳಿದವಳೊಬ್ಬಳಾದರೆ, ಮದುವೆ ಎಂಬುದು ಮೂರ್ಖತನ ಅಂದುಕೊಂಡೇ, ಜೀವನದ ಭಧ್ರತೆಗಾಗಿ ಮದುವೆಯಾದವಳೊಬ್ಬಳು, ತಾಯ್ತನವನ್ನು ಅದುಮಿ ಹಿಡಿದು ಕಣ್ಣೀರು ಕರೆದವಳೊಬ್ಬಳು, ವೇಶ್ಯೆಯಾಗಿ ಹುಟ್ಟಿ, ಮರ್ಯಾದಸ್ಥ ಬಾಳಿಗಾಗಿ ಊರು ಬಿಟ್ಟು ಓಡಿ ಹೋದವಳು, ಕಾದು ಕಾದು ಅಲೆದಾಡಿ, ಮದುವೆಯಾಗಿ ಗಂಡನನ್ನು ನಂಬಿ, ಅವನ ಸೆರೆಗೆ ಸಿಲುಕಿ ತಪ್ಪೇನೂ ಮಾಡದಿದ್ದರೂ, ತಾನು ಜಾರೆಯೆಂದು ಬರೆದು ಕೊಟ್ಟ ಸಹನಾಮಯಿಯೊಬ್ಬಳು, ಹೀಗೇ ಐವರು ಸ್ತ್ರೀಯರ ಜೀವನ ಇಲ್ಲಿ ಕಾದಂಬರಿಯಾಗಿದೆ. ಇಲ್ಲಿನ ಕೆಲವೊಂದು ಸನ್ನಿವೇಶಗಳು ಊಹೆಗೂ ಮೀರಿದ ಸತ್ಯಗಳಾಗಿವೆ ಎನ್ನುತ್ತಾರೆ ಕಾರಂತರು.


ಪ್ರಸ್ತುತ ಕಾದಂಬರಿಯಲ್ಲಿ, ಬಹಳ ಮುಖ್ಯವಾಗಿ ಓದುವ ಕಾಡುವ ಕೆಲವೊಂದು ಘಟನೆಗಳೆಂದರೆ, ಒಂದು ವಿನುತ ತನ್ನ ಗಂಡನಿಂದ ಅನುಭವಿಸಬೇಕಾಗಿ ಬರುವ ಕಷ್ಟಗಳು, ವಿನುತ ಒಬ್ಬಳು ವೇಶ್ಯೆ ಸಂತತಿಯಾಗಿದ್ದರೂ ಕೂಡಾ, ಅವಳು ಅದರಿಂದ ಪಾರಾಗಲೆಂದೇ ಮನೆ ಬಿಟ್ಟು ಮುಂಬಯಿಗೆ ಬರುತ್ತಾಳೆ. ಅಲ್ಲಿ ಸಂಬಂಧಿಕರ ಮನೆಯಲ್ಲೇ ಉಳಿದು ಹೊರಗಡೆ ಚಾಕರಿಗೆ ಹೋಗುತ್ತಾಳೆ. ನಂತರ ಅವಳ ಮನೆಯಂತೆಯೇ, ಆ ಮನೆಯಲ್ಲೂ ಇವಳ ಬಗ್ಗೆ ಸಂದೇಹ ಪಟ್ಟು ಏನೇನೋ ಮಾತನಾಡಲಾರಂಭಿಸಿದಾಗ, ಹೊರಗಡೆ ಒಂದು ಬಾಡಿಗೆ ರೂಮೊಂದರಲ್ಲಿ, ತನ್ನ ಜೊತೆ ಆಫೀಸು ಕೆಲಸದಲ್ಲಿದ್ದವರೊಡನೆ ಉಳಿಯುವ ನಿರ್ಧಾರ ಮಾಡುತ್ತಾಳೆ. ಯಾವಾಗ, ವಿವಾಹಿತನೊಬ್ಬನಿಂದ ಅವಳಿಗೆ ಗಂಟು ಹಾಕಿಸುತ್ತಾರೋ ಅಂದಿನಿಂದ ಅವಳು ಕಷ್ಟಗಳನ್ನು ಕೈ ಬೀಸಿ ಕರೆದಂತಾಯಿತು. ಮುಂದೆ ದುಃಖ, ಸಂಕಷ್ಟ, ಅವಮಾನಗಳ ಬದುಕು. 


ವಿನುತ ಸಹನಾಮಯಿ ಅಲ್ಲದೇ ಹೋಗಿದ್ದರೆ, ಅವಳೆಂದೋ ಅವನನ್ನು ಬಿಟ್ಟು ಓಡಿ ಹೋಗಬೇಕಿತ್ತು. ಆದರೆ, ಅವಳ ಮಕ್ಕಳಲ್ಲದ ಮಕ್ಕಳನ್ನು(ವಿವಾಹಿತ ಗಂಡನ ಮಾಜಿ ಪತ್ನಿಯ ಎರಡು ಮಕ್ಕಳ ಜವಾಬ್ದಾರಿ ವಿನುತಳ ಮೇಲಿತ್ತು) ಸಾಕುವ ನೆನಪಿನಲ್ಲಾದರೂ, ಜೊತೆಗೆ ತನ್ನೆರೆಡು ಮಕ್ಕಳೂ ಇರುವುದರಿಂದ ಅವರನ್ನು ನೆನೆದು ಮೌನಿಯಾದಳು. ತಾನು ಜಾರೆಯೆಂದೂ, ತನ್ನ ನಾಲ್ಕು ಮಕ್ಕಳು ಜಾರೆಯಾದ ತನಗೆ ಹುಟ್ಟಿದವು ಎಂದೂ ಲಿಖಿತ ಸಾಕ್ಷಿ ಬರೆದು ರುಜು ಹಾಕಲು ಒತ್ತಾಯ ಮಾಡಿದನು. ಹಿಂಜರಿದಾಗ, ಆತ್ಮಹತ್ಯೆಗೈಯುವದಾಗಿ ಬೆದರಿಕೆ ಹಾಕಿದನು. ಕೊನೆಗೆ ಅದಕ್ಕೂ ಶರಣಾಗುತ್ತಾಳೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತೆ ಎಂದರೆ, ವಿನುತಳ ಗಂಡ ಅಪಘಾತವೊಂದರಲ್ಲಿ ಕಾಲು ಮುರಿದು ಮನೆ ಸೇರುವವರೆಗೂ, ಅಲ್ಲ ಆನಂತರವೂ ಮುಂದುವರಿದಿತ್ತು ಅವನ ಪ್ರಾಣ ಪಕ್ಷಿ ಹಾರಿ ಹೋಗುವವರೆಗೂ.. ಅದುವರೆಗೂ ಏನೂ ಮಾತನಾಡದೆ ಅವನ ಚಾಕರಿ ಮಾಡಿದಳು ವಿನುತಾ...


ಕಾಡುವ ಇನ್ನೊಂದು ಪಾತ್ರ ಮನೋಹರನದ್ದೇ.. ಮನೋಹರ ಸಂಪ್ರದಾಯಸ್ಥ ಕುಟುಂಬದಿಮದ ಬಂದವನು. ಒಳ್ಳೆಯ ವಿದ್ಯಾವಂತ, ನಾಟಕಾಸಕ್ತಿಯುಳ್ಳವನೂ ಹೌದು..ಇಲ್ಲಿ ಬರುವ ಮುಂಜುಳ, ವಿನುತರಂತಹ ಎಲ್ಲ ಮುಖ್ಯ ಪಾತ್ರಗಳೂ ಕಲಿತ ಶಾಲೆಯಲ್ಲೇ ಅವನೂ ಕಲಿತದ್ದು. ಮಂಜುಳಾ ಅಂದರೆ ಅವನಿಗೆ ಬಹಳ ಪ್ರೀತಿ. ಮಂಜುಳಳಿಗೂ ಅತ್ತ ಒಲವಿತ್ತು. ಚುಟುಕಾಗಿ ಹೇಳಬೇಕೆಂದರೆ, ಇಬ್ಬರೂ ಶಾಲಾ ಶಿಕ್ಷಣದ ನಂತರ, ಮಂಗಳೂರಿಗೆ ಹೋಗುತ್ತಾರೆ. ಅಲ್ಲಿ ಒಂದೇ ಕಾಲೇಜಿನಲ್ಲಿ ಕಲಿಕೆ. ಆನಂತರ ಮನೋಹರ ನಟನೆಯ ಹುಚ್ಚು ತಲೆಗೆ ಹತ್ತಿದ್ದರಿಂದ ಮುಂಬಯಿಗೆ..ಮಂಜುಳಾ ದಾರಿ ಕಾಯುತ್ತಾ ಕುಳಿತವಳು ಕೊನೆಗೆ ಮನೆ ಬಿಟ್ಟು ಓಡಿ ಹೋಗುತ್ತಾಳೆ. ಅದೇ ಮುಂಬಯಿಗೆ.. ವರ್ಷಗಳ ಕಾಲ ಇಬ್ಬರೂ ಭೇಟಿಯೋ, ಪತ್ರವೋ ಯಾವುದೂ ಇಲ್ಲ. ಮನೋಹರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ, ಅವನ ಬಾಳು ಧೂಳೀಪಟವಾಗುತ್ತದೆ. ದಾರಿದ್ರ್ಯ ಕಷ್ಟ ಕೋಟಲೆಗಳು ಅವನನ್ನು ಬೆನ್ನುಬಿಡದೆ ಹಿಂಬಾಲಿಸುತ್ತದೆ. ಕೊನೆಗೆ ಮಂಜುಳಾ ಭೇಟಿಯಾಗುವಾಗ ಕಾದಂಬರಿ ಅಂತಿಮ ಘಟ್ಟಕ್ಕೆ ತಲುಪಿರುತ್ತದೆ. ಮನೋಹರ ಕ್ಷಯ ರೋಗದಿಂದ ಸಾವನ್ನು ಎದುರುನೋಡುತ್ತಿರುವಾಗ ಮಂಜುಳಾ ಸಹಾಯಕ್ಕಾಗಿ ನಿಲ್ಲೋದು, ಅವಳಲ್ಲಿಗೆ ತಲುಪೋದು, ವಿನುತ ಮತ್ತು ಮಂಜುಳಾ ಒಂದಾಗುವುದು ಎಲ್ಲವೂ ಕಥೆಯ ಗುಟ್ಟು.


ಇಲ್ಲಿ ಕೆಲವೊಂದು ತುರ್ತು ನಿರ್ಧಾರಗಳಿಂದಾಗಿ ಭವಿಷ್ಯದಲ್ಲಿ ಸಮಸ್ಯೆಗಳನ್ನೆದುರಿಸುವ, ಅಥವಾ ಆಸೆ, ವ್ಯಾಮೋಹ, ಕಾಮ ಇತ್ಯಾದಿಗಳ ತುಡಿತ ಹೆಚ್ಚಾದ ಯೌವನ ಕಾಲದಲ್ಲಿ ಮನೆಯವರನ್ನು ಬಿಟ್ಟು ಹೋಗಿ, ಸ್ವಚ್ಛಂದ ಹಕ್ಕಿಯಾಗಿ ಹಾರಾಡುವ ಬಯಕೆಗಳೆಲ್ಲವೂ ಮುಂದೆ ದುರಂತ ಚಿತ್ರಣಗಳಾಗಿ ಪರಿಣಮಿಸುವ, ಹಲವರ ಕಣ್ಣೀರ ಕರೆಯುವಂತೆ ಮಾಡುವ ಒಂದು ಅದ್ಭುತ ಕಥೆ , ಪಾತ್ರಗಳ ವ್ಯಥೆ 'ಬತ್ತದ ತೊರೆ'ಯಲ್ಲಡಗಿದೆ.


-ನಿಝಾಮ್ ಅನ್ಸಾರಿ ಕಲ್ಲಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...