ಕಳೆದ ಕೆಲವು ದಿನಗಳ ಹಿಂದೆ ಅಂಡಮಾನ್ ಸೆಲ್ಲುಲರ್ ಜೈಲಿನ ಬಗ್ಗೆ ಕೆಲವೊಂದು ಚರ್ಚೆಗಳು ನಡೆಯುತ್ತಿರೋದನ್ನ ನೋಡಿದಾಗ, ಗೆಳೆಯನೊಬ್ಬನಲ್ಲಿ ಈ ಬಗ್ಗೆ ತಿಳಿಸುತ್ತಾ, ನಮಗೂ ಅಂಡಮಾನ್ ಗೆ ಒಮ್ಮೆ ಹೋಗಬೇಕಿತ್ತು ಅಂತ ಹೇಳಿದ್ದೆ. ಅವನೂ ಕೂಢಾ ಹೌದಂದಿದ್ದ. ಕಳೆದ ದಿನ ಅಂಡಮಾನ್ ಬಗ್ಗೆ ಓದಿಕೊಳ್ಳಲು ಕನ್ನಡದಲ್ಲಿ ಪುಸ್ತಕಗಳು ಸಿಗುಬಹುದಾ ಅಂತ ವೆಬ್ ತಾಣಗಳೊಳಗೆ ಜಾಲಾಡಿದ್ದೆ. ಹಾಗೆ ಸಿಕ್ಕ ಕೃತಿಗಳಲ್ಲಿ ಓದಬೇಕು ಅಂತ ಅನ್ನಿಸಿದ್ದು ಪೂರ್ಣಚಂದ್ರ ತೇಜಸ್ವಿ ಅವರ ಅಲೆಮಾರಿಯ ಅಂಡಮಾನ್. ಈ ಪುಸ್ತಕದ ವಿಶೇಷತೆ ಅಂದರೆ, ಇದರಲ್ಲಿ ಎರಡು ಕೃತಿಗಳಿವೆ. ಒಂದು ಅಂಡಮಾನ್ ಪ್ರವಾಸ ಕಥನವಾದರೆ, ಮಗದೊಂದು ನೈಲ್ ನದಿಯ ಬಗೆಗಿನ ಅಧ್ಯಯನ ಲೇಖನಗಳ ಸಂಗ್ರಹ. ನಿಜಕ್ಕೂ ಎರಡೂ ಕೂಡಾ ಜ್ಞಾನದ ಅದ್ಭುತ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಅಂಡಮಾನ್ ಬಗ್ಗೆ ಹೇಳುವಾಗ, ಅಲ್ಲಿನ ಸಮುದ್ರಗಳಿಂದ ತೀರಕ್ಕಪ್ಪಳಿಸುವ ಹೆದ್ದೆರೆಗಳ ಭಯಾಜನಕ ವಾತಾವರಣದ ಬಗ್ಗೆ ಹೇಳುತ್ತಾ, ಲೇಖಕರು ತನ್ನ ಜೊತೆಗಿದ್ದ ತಂಡದೊಂದಿಗೆ ಅಲ್ಲಿ ಸಂದರ್ಶಿಸಿದ ಪ್ರತಿಯೊಂದು ಜಾಗವನ್ನೂ ಅದರ ವೈಶಿಷ್ಟ್ಯವನ್ನೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನಾನು ಯಾವ ಜೈಲಿನ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೆನೋ, ಆ ಜೈಲಿಗೆ ತನ್ನ ತಂಡದವರೂ ಹೋದರೂ, ತಾನು ಹೋಗದಿದ್ದುದಕ್ಕೋ, ಅಥವಾ ಬೇರ್ಯಾವುದೋ ಕಾರಣಕ್ಕೇನೋ ತಿಳಿಯದು ಆ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ನೆನಪಿಸಿದ್ದು ಬಿಟ್ಟರೆ, ಸ್ಪಷ್ಟವಾಗಿ ಮಾಹಿತಿಗಳನ್ನು ನೀಡಿಲ್ಲ, ಆದರೇನಂತೆ, ನನಗೇನೂ ಅಲ್ಪವೂ ನಿರಾಶೆಯಾಗಲಿಲ್ಲ, ಕಾರಣವೇನೆಂದರೆ, ಅಷ್ಟೊಂದು ರೀತಿಯ ಭೀತಿಜನಕ, ಸಂತೋಷದಾಯಕ, ಸ್ವಾರಸ್ಯಕರ ಸಂಗತಿಗಳು ಅವರ ಪ್ರವಾಸದಲ್ಲಿದ್ದುವು. ಹಾಗಾಗಿ ಪುಟಗಳಿನ್ನೂರು ಸರಿದುದೇ ತಿಳಿಯಲಿಲ್ಲ.
ಅಂಡಮಾನ್ ನಲ್ಲಿ ಹವಳದ ಕಲ್ಲುಗಳ ಬಗ್ಗೆ, ಹವಳದಂತೆ ಹೊಳೆಯುವ ಜೀವಿಗಳ ಬಗ್ಗೆ, ಅಲ್ಲಿನ ಸುಂದರಿಗಳಾದ ಮೀನುಗಳ ಬಗ್ಗೆ ತುಂಬಾ ಮಾಹಿತಿಗಳಿವೆ. ಅಲ್ಲಿನ ದಟ್ಟಾರಣ್ಯಗಳು, ನೀಲಿ ಬಣ್ಣದ ನೀರು ಇರುವಂತೆ ಕಾಣಿಸುವ ಸಮುದ್ರದ ಸೌಂದರ್ಯ, ಅದರ ಹತ್ತಿರ ಹೋದಂತೆಲ್ಲಾ ತಳಭಾಗದ ಜಲಚರಗಳನ್ನೊಳಗೊಂಡ ಸಕಲ ವಸ್ತುಗಳೂ ಗೋಚರಿಸುವ ಅದರ ವಿಶೇಷತೆಗಳು, ಮನೋಹರ ದೃಶ್ಯಗಳು, ಹಡಗು ಯಾನದಲ್ಲಿ ಉಂಟಾದ ರಸವತ್ತಾದ ಅನುಭವಗಳು, ಯಾತನೆಗಳು, ಗಾಳ ಹಾಕಿ ಮೀನು ಹಿಡಿಯಲು ಹೋದಾಗಲೆಲ್ಲಾ ಅವರನ್ನು ಕಾಡುತ್ತಿದ್ದ ನಿರಾಶೆ, ಅಲ್ಲಿರುವ ಮಲಯಾಳಿ, ಕನ್ನಡಿಗರೊಡನೆ ಆದ ಪರಿಚಯಗಳು ಎಲ್ಲವೂ ಒಂದು ರೀತಿಯ ಮೋಹಕ ಅನುಭವಗಳನ್ನು ಕಟ್ಟಿಕೊಡುತ್ತದೆ. ಅದರಲ್ಲೂ ಪ್ರತಿಯೊಂದು ಸ್ಥಳಗಳ ಬಗ್ಗೆ ವಿವರಿಸುವಾಗಲೂ ಆ ಸ್ಥಳದ ಪೂರ್ವೇತಿಹಾಸವನ್ನು ಕೆದಕುವುದು ತೇಜಸ್ವಿ ಅವರ ಬರಹದುದ್ದಕ್ಕೂ ಕಾಣಬಹುದಾಗಿದೆ..
ಮಹಾನದಿ ನೈಲ್:
ಅಂಡಮಾನ್ ಗಿಂತಲೂ ಮಹಾನದಿ ನೈಲ್ ಬಗ್ಗೆ ಬರೆದ ಅಧ್ಯಯನ ಲೇಖನಗಳು ಪ್ರತಿಯೊಂದೂ ನೈಲ್ ನದಿಯ ಮೂಲವನ್ನು ಹುಡುಕುವಲ್ಲಿ ವರ್ಷಗಳ ಕಾಲ ಅವಿರತ ಶ್ರಮವಹಿಸಿದ ಸ್ಟೀಕೆ, ಸ್ಟಾನ್ಲಿ, ಬೇಕರ್, ಲಿವಿಂಗ್ ಸ್ಟನ್ ಮುಂತಾದವರು, ಅದರಲ್ಲೂ, ಸ್ಟಾನ್ಲಿ ಎಂಬ ಪತ್ರಕರ್ತ ತನ್ನ ಜೀವನವನ್ನೇ ನದಿಯ ಮೂಲ ಹುಡುಕುವುದಕ್ಕಾಗಿ ವಿನಿಯೋಗಿಸಿದ ಚಾರಿತ್ರಿಕ ಘಟನೆಗಳನ್ನು ತಿಳಿಯಲು ಸಾಧ್ಯವಾಯಿತು.
ನನಗೆ ನೈಲ್ ನದಿಯ ಬಗ್ಗೆ ಇಸ್ಲಾಮಿಕ್ ಇತಿಹಾಸದಲ್ಲಿ ಹಝ್ರತ್ ಮೂಸಾ ನೆಬಿ ಅವರ ಬಾಲ್ಯದ ಘಟನೆಗಳಿಗೆ ಸಾಕ್ಷಿಯಾಗಿ ನಿಂತ ಕೆಲವೊಂದು ಘಟನೆಗಳ ಮತ್ತು ಉಮರ್ ಖಲೀಫರ ಕಾಲದಲ್ಲಿ ನಡೆದ ಒಂದು ವಿಚಿತ್ರ ಘಟನೆಯ ಬಗ್ಗೆ ಕೇಳಿ ತಿಳಿದಿದ್ದಲ್ಲದೆ, ನೈಲ್ ಮೂಲವನ್ನು ಅನ್ವೇಷಿಸಿ ಹೊರಟ ಯುರೋಪಿಯನ್ನರ ಪೂರ್ವೇತಿಹಾಸವನ್ನು ತಿಳಿಯೋದು ಈ ಕೃತಿಯಿಂದಲೇ. ಅಷ್ಟಕ್ಕೂ ನೈಲ್ ನದಿ ಅದೊಂದು ಅದ್ಭುತಗಳ ಮಹಾ ಪ್ರಪಂಚ ಅನ್ನೋದು ಬಹಳ ಸ್ಪಷ್ಟ. ಅದರ ಬಗ್ಗೆ ಆಂಗ್ಲ, ಅರೆಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಕೃತಿಗಳು ಅದೆಷ್ಟೋ,,ಆ ಬಗ್ಗೆ ಕುತೂಹಲಗಳನ್ನು ಕೊಟ್ಟ ಮಹಾನದಿನೈಲ್ ಕೃತಿಯನ್ನು ಬರೆದ ತೇಜಸ್ವಿ ಎಂಬ ಮಹಾ ಚೇತನಕ್ಕೆ ಒಂದು ಬಿಗ್ ಸೆಲ್ಯೂಟ್....
-ನಿಝಾಮ್ ಅನ್ಸಾರಿ ಕಲ್ಲಡ್ಕ
ಕಾಮೆಂಟ್ಗಳು